ಕೃಷ್ಣೆ ಹೊಳೆ ದಕ್ಷಿಣ ಭಾರತದ ಎರಡನೆಯ ದೊಡ್ಡ ಹೊಳೆಯಾಗಿದೆ. ಈ ಹೊಳೆಯು ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವರ‍ದ ಹತ್ತಿರ ಕಡಲು ಮಟ್ಟಕ್ಕಿಂತ ೧೩೩೮ ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು ೧೩೯೨ ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇಶ‍ದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿ ‍ ಯನ್ನು ಸೇರುತ್ತದೆ. ಕೃಷ್ಣೆ ಹೊಳೆ ಮಹಾರಾಷ್ಟ್ರ,ಕರ್ನಾಟಕ, ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹರಿಯುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ.ಇದರ ಮುಖ್ಯವಾದ ಉಪನದಿಗಳೆಂದರೆ ತುಂಗಭದ್ರಾ , ಕೊಯ್ನಾ, ಭೀಮಾ , ಮಲಪ್ರಭಾ ,ಮತ್ತು ಘಟಪ್ರಭಾ. == ಜಲಾನಯನ ಪ್ರದೇಶ == ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು ೨,೬೦,೦೦೦ ಚದರ ಕಿ.ಮಿ. ಇರುತ್ತದೆ. ಇದರಲ್ಲಿ ಮಹಾರಾಷ್ಟ್ರದಲ್ಲಿ ೬೮,೦೦೦ ಚ.ಕಿ.ಮಿ.,ಕರ್ನಾಟಕದಲ್ಲಿ ೧,೧೨,೬೦೦ ಚ.ಕಿ.ಮಿ. ಹಾಗೂ ಆಂಧ್ರ ಪ್ರದೇಶದಲ್ಲಿ ೭೫,೬೦೦ ಚ.ಕಿ.ಮಿ. ವ್ಯಾಪಿಸಿದೆ. == ಆಣೆಕಟ್ಟುಗಳು == ಮಹಾರಾಷ್ಟ್ರದಲ್ಲಿ ಕೊಯ್ನಾದ ಹತ್ತಿರ, ಕರ್ನಾಟಕದಲ್ಲಿ ಆಲಮಟ್ಟಿ ಮತ್ತು ನಾರಾಯಣಪುರಗಳಲ್ಲಿ ಹಾಗೂ ಆಂಧ್ರ ಪ್ರದೇಶದಲ್ಲಿ ಶ್ರೀಶೈಲಂ ಮತ್ತು ನಾಗಾರ್ಜುನಸಾಗರದಲ್ಲಿ ಕೃಷ್ಣಾ ನದಿಗೆ ಆಣೆಕಟ್ಟುಗಳನ್ನು ಕಟ್ಟಲಾಗಿದೆ. == ಶಿಲಾನ್ಯಾಸ == ೧೯೬೨ರಲ್ಲಿ ಭಾರತ‍ದ ಪ್ರಧಾನ ಮಂತ್ರಿ‍ಯಾದ ಶ್ರೀ ಲಾಲ ಬಹಾದ್ದೂರ ಶಾಸ್ತ್ರಿ‍ಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗೂ ಅದರ ಕೆಳಗೆ ಸುಮಾರು ೭೦ ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗೂ ಮಲಪ್ರಭಾಗಳ ಸಂಗಮದ ಕೆಳಭಾಗದಲ್ಲಿ ನಾರಾಯಣಪುರ ಜಲಾಶಯಗಳಿವೆ. ೧೯೯೪ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ರಚನೆಯಾಯಿತು. ಆಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯ‍ದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪೂರ್ಣಪ್ರಮಾಣದ ಎತ್ತರವಾದ ೫೨೪ ಮೀಟರುಗಳ ಬದಲಾಗಿ ೫೧೯.೬೦ ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ. == ಮುಳುಗಡೆ ಪ್ರದೇಶ == ಆಲಮಟ್ಟಿಯಿಂದ ಹಿಪ್ಪರಗಿವರೆಗೆ ೧೩೬ ಕಿ.ಮಿ.ವರೆಗೆ ಹಿನ್ನೀರು ವ್ಯಾಪಿಸಿದ್ದು ೨೦೧ ಗ್ರಾಮಗಳು ಹಾಗೂ ಬಾಗಲಕೋಟೆಯ ಬಹುತೇಕ ಭಾಗ ಮುಳುಗಡೆಯಾಗಿವೆ. == ಜಲ ಸಂಗ್ರಹ == ಹಿಪ್ಪರಗಿಯಲ್ಲಿ ೧೩ ಟಿ.ಎಮ್.ಸಿ., ಆಲಮಟ್ಟಿಯಲ್ಲಿ ೧೨೩ ಟಿ.ಎಮ್.ಸಿ. (೫೧೯.೬೦ ಮೀಟರ್ ವರೆಗೆ) ಹಾಗೂ ನಾರಾಯಣಪುರದಲ್ಲಿ ೩೭ ಟಿ.ಎಮ್.ಸಿ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಬಚಾವತ್ ಆಯೋಗದ ಸ್ಕೀಮ್ ಎ ಅಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾದ ೧೭೩ ಟಿ.ಎಮ್.ಸಿ. ನೀರಿನ ಪೂರ್ಣ ಸಂಗ್ರಹವಾದಂತಾಗಿದೆ. == ನೀರಾವರಿ ಪ್ರದೇಶ == ಪ್ರಥಮ ಘಟ್ಟದಲ್ಲಿ ೧೧೯ ಟಿ.ಎಮ್.ಸಿ. ನೀರನ್ನು ಬಳಸಿಕೊಂಡು ಸುಮಾರು ೬,೨೨,೦೦೦ ಹೆಕ್ಟೇರ್ ಜಮೀನಿಗೆ ಹಾಗೂ ದ್ವಿತೀಯ ಘಟ್ಟದಲ್ಲಿ ಸ್ಕೀಮ್ ಬಿ ಯಲ್ಲಿ ದೊರೆಯುವ ನೀರನ್ನೂ ಸಹ ಬಳಸಿಕೊಂಡು ಹೆಚ್ಚಿನ ೩,೯೭,೦೦೦ ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶವಿದೆ. == ವಿದ್ಯುತ್ ಉತ್ಪಾದನೆ == ೧೫ ಮೆಗಾವ್ಯಾಟ್ ಉತ್ಪಾದಿಸುವ ೧ ಹಾಗೂ ೫೫ ಮೆಗಾವ್ಯಾಟ್ ಉತ್ಪಾದಿಸುವ ೩ ಘಟಕಗಳನ್ನು ಸ್ಥಾಪಿಸಲಾಗಿದೆ. == ವೆಚ್ಚ == ಜಲಾಶಯ ನಿರ್ಮಾಣಕ್ಕಾಗಿ ೫೫೦೦ ಕೋಟಿ, ಸಂಪರ್ಕ ವ್ಯವಸ್ಥೆಗಾಗಿ ೪೦೦ ಕೋಟಿ ಹಾಗೂ ಪುನರ್ವಸತಿಗಾಗಿ ೨೧೦೦ ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಮಾಡಲಾಗಿದೆ. == ಉದ್ಘಾಟನೆ == ೨೧ ಅಗಸ್ಟ ೨೦೦೬ ರಂದು ಭಾರತದ ಆಗಿನ ರಾಷ್ಟ್ರಪತಿಯಾಗಿದ್ದ ಶ್ರೀ ಅಬ್ದುಲ್ ಕಲಾಂ ಅವರು ಲಾಲ ಬಹಾದ್ದೂರ ಶಾಸ್ತ್ರಿ ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು. == ಪ್ರೇಕ್ಷಣೀಯ ಸ್ಥಳ == ಆಲಮಟ್ಟಿಯಿಂದ ಸುಮಾರು ೪೦ ಕಿ.ಮಿ.ದೂರದಲ್ಲಿರುವ ಕೂಡಲ ಸಂಗಮ‍ವು ಬಸವಣ್ಣನವರ ಐಕ್ಯ ಸ್ಥಳವಾಗಿದ್ದು ಕರ್ನಾಟಕ ಸರಕಾರವು ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸಿದೆ. == ನೋಡಿ == ಕರ್ನಾಟಕದ ನದಿಗಳು ಭಾರತದ ನದಿಗಳು == ಬಾಹ್ಯ ಸಂಪರ್ಕಗಳು == 2010-12-27 ವೇಬ್ಯಾಕ್ ಮೆಷಿನ್ ನಲ್ಲಿ. 2009-03-08 ವೇಬ್ಯಾಕ್ ಮೆಷಿನ್ ನಲ್ಲಿ. (): 2012-07-07 ವೇಬ್ಯಾಕ್ ಮೆಷಿನ್ ನಲ್ಲಿ. 2012-07-07 ವೇಬ್ಯಾಕ್ ಮೆಷಿನ್ ನಲ್ಲಿ. , 2009 , 2009 [೧] 2013-10-14 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==